April 26, 2008
ಕನ್ನಡದ ವಿಶಾಲದ ಬ್ಲಾಗುಗಳ ಲೋಕದಲ್ಲಿ ವಿಹರಿಸುವಾಗ ಎಡತಾಕುವ
ಬ್ಲಾಗುಗಳಲ್ಲಿ ನನ್ನ ಪ್ರತಿಕ್ರಿಯೆಯಾಗಿ ವ್ಯಕ್ತಪಡಿಸುವ ಅಭಿಪ್ರಾಯಗಳನ್ನೆಲ್ಲಾ
ಸಂಗ್ರಹಿಸಿಡುವ ಉದ್ದೇಶ ಈ ಲೇಖನಗಳದ್ದು. ಐದೈದೇ ಪ್ರತಿಕ್ರಿಯೆಗಳ ಗುಚ್ಚಗಳಿವು.
……………………………………………………………………….
“ನಮಗರ್ಥವಾಗದ ಪೊಲಿಟಿಕ್ಸ್!? “
ಈ ಬಾರಿಯ ಚುನಾವಣೆಯ ಸಮಯದಲ್ಲಿ ರಾಜಕಾರಣದಲ್ಲಿನ ಅವಾಂತರಗಳನ್ನು ಹಳಿಯುವವರ ಪಟ್ಟಿಯಲ್ಲಿ ರಾಜಕಾರಣಿಗಳೂ ಸೇರಿಕೊಂಡಿರುವುದು ವಿಶೇಷ! ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡ ಫುಲ್ ಟೈಮ್ ಪಾಲಿಟಿಕ್ಸಿನಲ್ಲಿ ಜೀವನ ಸವೆಸಿದ ನಾಯಕರುಗಳಿಗೆ ನೆಲದ ಮಾಲಿಕರ, ಗಣಿಯ ಧಣಿಗಳ ದುಡ್ಡು ನಿಜಕ್ಕೂ ನಡುಕ ಹುಟ್ಟಿಸಿದೆ. ರಾಜಕೀಯದಲ್ಲಿ ಹಣ ಹರಿಸುವುದು ಅಪರಾಧ ಎಂಬ ಜ್ಞಾನೋದಯ ತಡವಾಗಿ ಆಗುತ್ತಿದೆ.
ಹಳೆಯ ಕ್ಲೀಷೆ ಎಂಬಂತೆ ನಮ್ಮ ರಾಜಕೀಯದ ಬಗ್ಗೆ ಮಾತನಾಡುವಾಗಲೆಲ್ಲಾ ನನಗೆ ಇದಕ್ಕೆ ಬರೀ ರಾಜಕಾರಣ ಕಾರಣವಾ ಎಂಬ ಆಲೋಚನೆ ಬರುತ್ತದೆ. ಜನ ಸೇವೆ ಮಾಡುವುದಕ್ಕಾಗಿ ಇಂಥಾ ನೂಕು ನುಗ್ಗಲಾ ಎಂದು ನಾವು ಟಿಕೆಟ್ಗಾಗಿ ಜನ ಮುಗಿಬೀಳುವುದುನ್ನು ಅಣಕಿಸಬಹುದು ಆದರೆ ರೋಗಿಗಳ ‘ಸೇವೆ’ ಮಾಡುವುದಕ್ಕಾಗಿ ಲಕ್ಷಗಟ್ಟಲೆ ಸುರಿದು ವೈದ್ಯಕೀಯವನ್ನು ಅಭ್ಯಾಸ ಮಾಡುತ್ತಾರೆಯೇ? ಬೇರಾವ ಕ್ಷೇತ್ರದಲ್ಲೂ ಕೆರಿಯರ್ಗಿಂತ ಮುಖ್ಯವಾಗದ ಆದರ್ಶ, ನೈತಿಕ ಜವಾಬ್ದಾರಿಗಳನ್ನು ಕೇವಲ ರಾಜಕಾರಣಕ್ಕೆ ಆರೋಪಿಸುವುದು ಏತಕ್ಕೆ? ಅದನ್ನೂ ಒಂದು ಪ್ರೊಫೆಶನ್ ಆಗಿ ಕಾಣುವ ಕಾಲ ಬರುವುದು ಯಾವಾಗ? ಈ ವಿಚಾರದಲ್ಲಿ ನಾವಿನ್ನೂ ಸ್ವಾತಂತ್ರ್ಯ ಪೂರ್ವ ಯುಗದಲ್ಲಿದ್ದೇವೆ ಅನ್ನಿಸುತ್ತದೆ.
ಅಂಥಾ ಪ್ರಜ್ಞಾವಂತ, ಬುದ್ಧಿವಂತ ಮತದಾರರಿರುವ ಅಮೇರಿಕಾದಲ್ಲೇ ಕೌಬಾಯ್ ಜಾರ್ಜ್ ಬುಶ್ ತನ್ನ ದೇಶದ ಶಸ್ತ್ರಾಸ್ತ್ರ ತಯಾರಿಕೆಯ ಕಂಪೆನಿಗಳ ಶೇರು ಮೌಲ್ಯ ಹೆಚ್ಚಿಸಲು, ಅವುಗಳ ಆದಾಯ ಹೆಚ್ಚಿಸಲು ಇರಾಕಿನಲ್ಲಿ ಲಕ್ಷಾಂತರ ಮಂದಿ ಇರಾಕಿಗಳ, ಸಾವಿರಾರು ಅಮೇರಿಕನ್ ಯೋಧರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತರುವುದು ಭ್ರಷ್ಠಾಚಾರವಾಗಿ ಕಾಣಿಸುವುದಿಲ್ಲವಾ?
ಯಾಕೋ, ರಾಜಕೀಯವನ್ನು ಅಸಹ್ಯವಾಗಿ ಕಾಣುವುದು ನಾವೆಲ್ಲರೂ ನಮ್ಮೆಲ್ಲರ ನೈತಿಕ ಜವಾಬ್ದಾರಿಯನ್ನು ಪೂರೈಸಲಾಗದ ವಿಫಲತೆಯನ್ನು ಮುಚ್ಚಿಹಾಕಲು, ಆದರ್ಶಗಳನ್ನು ದಫನ್ನು ಮಾಡಿರುವುದನ್ನು ಮರೆಯಾಗಿಸಲು ಕಂಡುಕೊಂಡಿರುವ ಉಪಾಯ ಅನ್ನಿಸುತ್ತದೆ.
……………………
“ಬೀದಿಪಾಲಾದವರ ಕಲ್ಯಾಣಕ್ಕಾಗಿ ರಸ್ತೆ ಅಗಲೀಕರಣ!”
ನಮ್ಮ ಕಲರವದಲ್ಲಿ ಕೋಲಾಹಲವೆಬ್ಬಿಸಲು ನೀವು ಓಡಿಸಿದ ರದ್ದಿಗಾರನನ್ನು ನಾವು ಹೆಚ್ಚಿನ ಅವಿದ್ಯಾಭ್ಯಾಸಕ್ಕಾಗಿ ಪರದೇಶಕ್ಕೆ ಅಟ್ಟಿದ್ದೇವೆ.
ಬೀದಿ ಅಗಲೀಕರಣದ ಬಗ್ಗೆ ಭಾವಿ ನಿಧಾನ ಮಂತ್ರಿ ಚಿರಯುವಕ ರಾಹುಳ ಹೇಳಿರುವುದು ಅತ್ಯಂತ ಸೂಕ್ತವಾಗಿದೆ. ಆದರೆ ಅವರ ಹೇಳಿಕೆಗೆ ಬೀದಿಪಾಲಾದ ಬೊಗಳೆ ಬ್ಯೂರೋದ ವರದ್ದಿಗಾರನಿಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ.
ನಮ್ಮ ನಡುವಿನ ಗನ ಗಂಭೀರ ವ್ಯಕ್ತಿಗಳ, ಸಾ-ಯಿತಿಗಳ, ನಾಯಿ-ಕರ ‘ಮಾನ’ಗಳು ಬೀದಿಗೆ ಬೀಳುತ್ತಿರುವ ಸಂಗತಿ ಹೆಚ್ಚಾಗುತ್ತಿರುವುದು ಜಾಗತೀಕಾರಣದ ಬಾಟಮ್ ಎಫಕ್ಟ್ ಎಂಬುದನ್ನು ನಮ್ಮ ಸುದ್ದಿ ಚೋರರು ರಾಹುಳನಿಗೆ ಭಾಷಣ ಬರೆಯುವ ಪಿಎಗೆ ತಿಳಿಸಿದ್ದಾರೆ. ಕ್ಯಾತೆ ಕಾದ-ಅಂಬರಿ ಪ್ರಕರಣದಲ್ಲಿ ಸಾಹಿತಿ, ಕಾದಂಬರಿಕಾರ, ಡಿಬೇಟರುಗಳ ಮಾನ, ‘ಬರ್ಡ್ ಸಾಂಗ್’ನಲ್ಲಿ ವಿಗ್ಗೇಶ್ವರ ಕೃಷ್ಣ ಭಗವಾನ್ ಮಾನ ಹಾಗೂ ಮೊನ್ನೆ ಮೊನ್ನೆಯ ನೈಪಾಲ್ ಪ್ರಹಸನದಲ್ಲಿನ ಮಣಗಟ್ಟಲೆ ಮಾನಗಳೆಲ್ಲವೂ ಸೇರಿದಂತೆ ದೇಶದಲ್ಲಿ ಹೆದ್ದೆಚ್ಚು ಜನರ ಮಾನ -ಮರ್ಯಾದೆಗಳು ಬೀದಿಗೆ ಬೀಳುತ್ತಿರುವುದರಿಂದಾಗಿ ರಸ್ತೆ ಅಗಲೀಕರಣ ಅನಿವಾರ್ಯ ಎಂಬ ಉಪಾಯವನ್ನು ನಾವೇ ಸೂಚಿಸಿದ್ದು ಎಂದು ಹೇಳಲು ಸಂತೋಷಿಸುತ್ತೇವೆ.
ಈ ಮಾಹಿತಿಯಿಂದ ವಂಚಿತನಾದ ನಿಮ್ಮ ಬೀದಿಪಾಲು ಬ್ಯೂರೋದ ರದ್ದಿಗಾರನನ್ನು ಬೀದಿಪಾಲು ಮಾಡಿದರೆ ನಾವು ನಮ್ಮ ಸಂಸ್ಥೆಯ ಅಗಲೀಕೃತ ಬೀದಿಯಲ್ಲಿ ಅವರಿಗೆ ವಾಸ್ತವ್ಯ ಹೂಡಲು ಸಿದ್ಧರಿದ್ದೇವೆ.
……………………
>>>>ಆದರೆ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ತೀರ್ಮಾನಿಸಬೇಕು ಎಂದು ಯಾರೂ ಅಷ್ಟೊಂದು ಹಠಕ್ಕೆ ಬಿದ್ದಂತೆ ಕಾಣುತ್ತರಲಿಲ್ಲ. >>>>
ತುಂಬಾ ಚೆನ್ನಾಗಿತ್ತು.
ಜೋಗಿ ಹೇಳುವ ಹಾಗೆ ನಮಗೆ ದಕ್ಕಿದಷ್ಟೇ ಕವಿತೆ ಎಂಬಂತೆ ಈ ಕಥೆಯೂ… ನನಗೆ ಈಗ ದಕ್ಕಿರುವಷ್ಟರ ಬಗ್ಗೆ ಸಂತೋಷವಿದೆ, ಇನ್ನೋ ಏನೋ ಇದೆ ಅದು ನನಗೆ ದಕ್ಕುತ್ತಿಲ್ಲ ಎನ್ನುವುದರ ಬಗ್ಗೆ ಅಸಮಾಧಾನವಿದೆ.
ಹೀಗೇ ಬರೆಯುತ್ತಿರಿ… ನಮ್ಮ ಓದುವ ಸಂತೋಷಕ್ಕಾಗಿ…
……………………
“ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ…”
ಹಣದುಬ್ಬರದ ಏರಿಕೆ ನಮ್ಮ ಮಾಧ್ಯಮಗಳಲ್ಲಿ ಏಕೆ ಗಂಭೀರ ಚರ್ಚೆಯ ವಿಷಯವಾಗಿಲ್ಲ? ಮೇಲ್ಮಧ್ಯಮ ವರ್ಗದವರಿಗೆ ಈ ಬೆಲೆಯೇರಿಕೆಯಿಂದಾಗಿ ಅಷ್ಟೇನೂ ಬಿಸಿ ತಟ್ಟದಿರುವುದರಿಂದಾಗಿ ಮಾಧ್ಯಮಗಳ ಗಮನ ಇತ್ತ ಹರಿದಿಲ್ಲವೇ? ಹಾಗಾದರೆ ಈ ಮಾಧ್ಯಮಗಳು ಪ್ರತಿನಿಧಿಸುವುದು ಯಾರನ್ನು?
ಹಳ್ಳಿಗಳಲ್ಲಿ ರೈತರಿಗೆ ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.ಇದಲ್ಲದೆ ಆಹಾರ ಧಾನ್ಯಗಳಿಂದ ಸಿಕ್ಕುವ ಲಾಭಾಂಶವೂ ಕಡಿಮೆ. ಇದರಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯು ಬೆಳವಣಿಗೆ ತಟಸ್ಥವಾಗಿದೆ. ದಿನೇ ದಿನೇ ಆಹಾರ ಧಾನ್ಯಗಳ ಬೆಲೆಯೇರಿಕೆ ಆಗುತ್ತಿದೆ. ಪೆನ್ ಡ್ರೈವು, ಐಪಾಡುಗಳು ದಿನೇ ದಿನೇ ಕಡಿಮೆ ಬೆಲೆಗೆ ಸಿಕ್ಕುತ್ತಿರುವುದನ್ನೇ ನೋಡಿ ನಾವು ಅಭಿವೃದ್ಧಿ ಹೊಂದಿದ್ದೇವೆ ಎಂದು ಬೀಗಬೇಕೆ?
ಯಾಕೋ ಗಾಬರಿಯಾಗುವುದು ಬಿಟ್ಟು ಬೇರೇನೂ ಮಾಡಲಾಗುತ್ತಿಲ್ಲ… ಇಂಥವುಗಳ, ದೇಶದ ಎಕಾನಮಿಯ ಬಗ್ಗೆ ನನ್ನ ಅಜ್ಞಾನವನ್ನು ನೆನೆಸಿಕೊಂಡರೆ ನಾಚಿಕೆಯೆನಿಸುತ್ತದೆ.
ಒಳ್ಳೆಯ ಲೇಖನ…
……………………
“ಹೊಗೇನಕಲ್, ಹಾಲಿವುಡ್ ಲಲನೆಯರು, ಸ್ಯಾಂಡಲ್ ವುಡ್ ಧೀರರು!”
ರವಿ ಸರ್,
ಕನ್ನಡ ನಾಡು ನುಡಿಯ ಬಗೆಗಿನ ಹೋರಾಟದ ವಿಚಾರ ಬಂದಾಗ ಕೇವಲ ಸಿನೆಮಾ ನಟರ ಬಗ್ಗೆ ಮಾತನಾಡುವುದೇಕೆ? ತಮಿಳು ಸಿನೆಮಾ ನಟರು ಹೋರ್ಆಟ ಮಾಡಿದರು ಎಂಬುದಕ್ಕೆ ಪ್ರತಿಯಾಗಿ ಇಲ್ಲೂ ಅಂಥ ಪ್ರತಿಭಟನೆ ನಡೆಯಬೇಕು ಎಂಬುದು ನಿಮ್ಮ ವಾದವೇ?
ಸಿನೆಮಾದ ನಾಯಕ ನಟರು ಹಾಗೂ ಕಲಾವಿದರೂ ಸಹ ತಮ್ಮ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು. ಸಾಹಿತಿಗಳು, ಪತ್ರಕರ್ತರು, ನ್ಯಾಯವಾದಿಗಳು, ವೈದ್ಯರು, ಇಂಜಿನಿಯರುಗಳು, ನೀಲಕೇಣಿಗಳು, ನೈಸ್ ಖೇಣಿಗಳು ಮುಂತಾದವ್ರಿಗೆ ಇಲ್ಲದ ಜವಾಬ್ದಾರಿ ಕೇವಲ ಸಿನೆಮಾ ನಟರಿಗೆ ಮಾತ್ರ ಏಕೆ ಹೊರಿಸಬೇಕು?
ಇನ್ನು ಹಾಲಿವುಡ್ಡಿನ ನಟರ ಸಮಾಜ ಸೇವೆಯ ಬಗ್ಗೆ ಬರೆದಿರುವಿರಿ. ಪಮೇಲಾ ಆಂಡರ್ಸನ್ ಮಾದರಿಯ ‘ಸಮಾಜ ಸೇವೆ’ ನಮಗೆ ಬೇಕೆ? ಇಷ್ಟಕ್ಕೂ ಅವರು ಸಮಾಜಸೇವೆಗಾಗಿ ತಮ್ಮ ಖ್ಯಾತಿಯನ್ನು ಬಳಸಿಕೊಳ್ಳುತ್ತಿದ್ದಾರೆಯೇ ಅಥವಾ ಖ್ಯಾತಿಗಾಗಿ ಸಮಾಜ ಸೇವೆಯನ್ನೇ? ಇತ್ತೀಚೆಗೆ ಸಮಾಜ ಸೇವೆ ಎಂಬುದು ಸಹ ಫ್ಯಾಶನ್ ಆಗುತ್ತಿದೆ.
ಸಂದರ್ಶನವೊಂದರಲ್ಲಿ ಹಿಂದಿಯ ಐಟಂ ಗರ್ಲ್ ರಾಖಿ ಸಾವಂತ್ ತನಗೆ ಹೆಚ್ಚು ಹೆಚ್ಚು ಐಟಂ ಸಾಂಗುಗಳಲ್ಲಿ ಅವಕಾಶ ಕೊಡಬೇಕು. ಅದರಿಂದ ನಾನು ಸಮಾಜ ಸೇವೆ ಮಾಡಲು ಹೆಚ್ಚು ನೆರವಾಗುತ್ತದೆ ಎಂದು ಹೇಳಿದ್ದು ಈ ಸಂದರ್ಭದಲ್ಲಿ ನೆನಪಾಗುತ್ತದೆ.
………………………………………………………………
